ಈಗಾಗಲೇ ಎಲ್ಲೆಡೆ ಮೈಕೊರೆಯುವ ಚಳಿ ಶುರುವಾಗಿದೆ. ಚರ್ಮವಂತೂ ಚಳಿಗಾಳಿಗೆ ಒಡೆದು ಮೈಯೆಲ್ಲಾ ತುರಿಕೆ ಆರಂಭವಾಗಿದೆ. ಚರ್ಮದ ಬಗ್ಗೆ ಅತೀ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ನೀರು ಸಿಕ್ಕುವುದಿಲ್ಲ. ಬಾಯಾರಿಕೆಯಾಗದಿರುವುದರಿಂದ ಯಾರೂ ಹೆಚ್ಚು ನೀರು ಸೇವಿಸುವುದಿಲ್ಲ. ನೀರು ರುಚಿಸುವುದೂ ಇಲ್ಲ. ಆದ್ದರಿಂದ ದೇಹಕ್ಕೆ ಬೇಕಷ್ಟು ನೀರು ಸಿಗದೆ ಬೇರೆ ಬೇರೆ ಸಮಸ್ಯೆಗಳು ಆರಂಭವಾಗುತ್ತವೆ. ಚಳಿಗಾಲದಲ್ಲಿ ಫ್ರಿಜ್ಜಿನಲ್ಲಿರುವ ಆಹಾರಗಳನ್ನು ತ್ಯಜಿಸುವುದು ಒಳ್ಳೆಯದು. ಆದಷ್ಟು ಬಿಸಿ ಇರುವ ಆಹಾರವನ್ನೇ ಸೇವಿಸಬೇಕು. ಚಳಿಗಾಲದಲ್ಲಿ ಸಿಗುವ ಹಣ್ಣು – ತರಕಾರಿಗಳನ್ನೇ ಹೆಚ್ಚು ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ಮರೆಯದಿರಿ. ದೇಹಕ್ಕೆ ಅಗತ್ಯವಾದಷ್ಟು ನಿದ್ದೆಯನ್ನು ತಪ್ಪಿಸದಿರಿ. ಸಕ್ಕರೆ ಉಪಯೋಗವನ್ನು ಸಂಪೂರ್ಣ ನಿಲ್ಲಿಸುವುದು ಉತ್ತಮ. ಏಕೆಂದರೆ ಸಕ್ಕರೆ ಸೇವನೆ ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ವಿಟಾಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಬೆಳ್ಳುಳ್ಳಿ ಉಪಯೋಗ ಹೆಚ್ಚಿಸಿ. ಬೆಳ್ಳುಳ್ಳಿಯಲ್ಲಿ ಸಲ್ಫರ್ ಅಂಶ ಹೆಚ್ಚಿರುವುದರಿಂದ ದೇಹದ ಉಷ್ಣತೆಯನ್ನು ಕಾಪಾಡುವುದಷ್ಟೇ ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬೆಳಗ್ಗಿನ ತಿಂಡಿಗೂ ಮೊದಲು 500 ಮಿ.ಲೀ. ನೀರು ಕುಡಿಯಿರಿ. ಇದು ದೇಹಕ್ಕೆ ಹೆಚ್ಚು ಶಕ್ತಿ ಕೊಡುತ್ತದೆ. ಗಿಡಮೂಲಿಕೆಯ ಕಷಾಯ ಅಥವಾ ನಿಂಬೆ ಹಣ್ಣಿನ ಟೀ ಕುಡಿಯುವುದು ಒಳ್ಳೆಯದು. ಸೂರ್ಯನ ಬೆಳಕಿನಲ್ಲಿ ನಿಲ್ಲುವುದು ಬಹಳ ಒಳ್ಳೆಯದು. ಸೂರ್ಯನ ಬೆಳಕಿನಲ್ಲಿರುವ ಡಿ ವಿಟಾಮಿನ್ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚು ಸೇವಿಸಿ. ಇವುಗಳಲ್ಲಿ ಪ್ರೋಟಿನ್, ಕ್ಯಾಲ್ಷಿಯಂ, ವಿಟಾಮಿನ್ ಎ ಮತ್ತು ಬಿ 12 ಹೆಚ್ಚಿರುವುದರಿಂದ ಮೂಳೆಗಳನ್ನು ಬಲಗೊಳಿಸುತ್ತದೆ. ನೀರನ್ನು ಕುಡಿಯುವಾಗಲೂ ಸ್ವಲ್ಪ ಬಿಸಿ ಮಾಡಿಯೇ ಸೇವಿಸಿ. ಚರ್ಮಕ್ಕೆ ಕೊಬ್ಬರಿ ಎಣ್ಣೆ ಅಥವಾ ಲೋಳೆಸರದ ರಸವನ್ನು ಹಚ್ಚಿಕೊಳ್ಳಿ. ಇದರಿಂದ ಚರ್ಮ ಒಡೆಯುವುದು ನಿಲ್ಲುತ್ತದೆ. ತುಟಿಗೆ ಬೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಆಗಾಗ ಹಚ್ಚುತ್ತಿರಿ. ಆಯಾ ಕಾಲಕ್ಕೆ ಸಿಗುವ ಹಣ್ಣು- ತರಕಾರಿಗಳನ್ನು ಸೇವಿಸುವುದು ಮತ್ತು ನಿಯಮಿತವಾದ ದೈಹಿಕ ವ್ಯಾಯಾಮದಿಂದ ಆರೋಗ್ಯ ಎಂದಿಗೂ ಸುಸ್ಥಿತಿಯಲ್ಲಿರುತ್ತದೆ. ಮೂಲ: ವಿಕ್ರಮ