ಪ್ರಸೂತಿ ಆರೈಕೆ ಯೋಜನೆ ಎಂದರೇನು? ಉತ್ತರ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಲ್ಲಿ ಪೌಷ್ಠಿಕಾಂಶಗಳ ಕೊರತೆ ಇರುವುದರಿಂದ ಇವರಲ್ಲಿ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಹೆಚ್ಚಾಗಿದೆ. ಅಗತ್ಯ ಆರೋಗ್ಯ ಸೇವೆಗಳು ದೊರೆಯದೆ ಈ ಸಮಸ್ಯೆ ಉಲ್ಬಣವಾಗಿದ್ದು, ಸಕಾಲಿಕ ಆರೋಗ್ಯ ತಪಾಸಣೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕಾಂಶ ಖರೀದಿಸಲು ಹಣಕಾಸಿನ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಪ್ರಸೂತಿ ಆರೈಕೆ ಯೋಜನೆಯಲ್ಲಿ ನೀಡುವ ಸೌಲಭ್ಯಗಳು • ಆಯಾಯ ಕ್ಷೇತ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಲ್ಲಿ ನೋಂದಾಯಿಸಿಕೊಂಡಿರುವ ಗರ್ಭೀಣಿ ಸ್ತ್ರೀಯರಿಗೆ ಎರಡು ಮತ್ತು ಮೂರನೇ ತ್ರೈಮಾಸಿಕ ಗರ್ಭಿಣಿ ಪರೀಕ್ಷೆ ಮುಗಿಸಿದ ನಂತರ ಮೂರನೇ ಗರ್ಭಿಣಿ ಪರೀಕ್ಷೆಯ ಸಂದರ್ಭದಲ್ಲಿ 1000 ರೂಪಾಯಿಗಳನ್ನು ಚೆಕ್ ಮೂಲಕ ನೀಡಲಾಗುವುದು • ಹೆರಿಗೆ ನಂತರ 1000ರೂ.ಗಳನ್ನು ಚೆಕ್ ಮೂಲಕ ಬಾಣಂತಿಯರಿಗೆ ನೀಡುವಲಾಗುವುದು. • ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕಾಂಶದ ಅವಶ್ಯಕತೆ ಬಗ್ಗೆ ತಿಳಿವಳಿಕೆ ನೀಡುವ ಒಂದು ಮಾಹಿತಿ ಪುಸ್ತಕ ನೀಡಲಾಗುವುದು. ಷರತ್ತುಗಳು ರಾಜ್ಯದ ಈಗಾಗಲೇ ಗುರುತಿಸಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿನ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳ ಗರ್ಭಿಣಿ ಸ್ತ್ರೀಯರು ಮಾತ್ರ ಈ ಸೌಲಭ್ಯಕ್ಕೆ ಅರ್ಹರು. ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯು ಬ್ಯಾಂಕ್ ಖಾತೆ ಹೊಂದಿರಬೇಕು. ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಈ ಸೌಲಭ್ಯ ಲಭ್ಯ ಪ್ರತಿ ಎ.ಎನ್.ಸಿ. ಭೇಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ/ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ದಿನಾಂಕ, ಸಹಿ ಮತ್ತು ಮೊಹರನ್ನು ನಮೂದಿಸಬೇಕು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಫಲಾನುಭವಿ ಗರ್ಭಿಣಿಯರ ದಾಖಲಾತಿ (ಎ.ಎನ್.ಸಿ) ಸಂಖ್ಯೆ ಹಾಗೂ ಒಂದನೇ ಅಥವಾ ಎರಡನೇ ಹೆರಿಗೆಯ ಖಚಿತತೆಗಾಗಿ ದಾಖಲೆ ಮಾಡಿ ಸಹಿ ಮಾಡಬೇಕು. ಹೆರಿಗೆಯು ಕಡ್ಡಾಯವಾಗಿ ಸರ್ಕಾರಿ ಆರೋಗ್ಯ ಕೇಂದ್ರ/ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯಬೇಕು. ಫಲಾನುಭವಿ ತನ್ನ ಜಾತಿ ಪ್ರಮಾಣ ಪತ್ರ ಮತ್ತು ಕಡಿಮೆ ಆದಾಯವಿರುವ ದಾಖಲಾತಿಯ ದೃಢೀಕರಿಸಿದ ಜೆರಾಕ್ಸ್ ಪ್ರತಿ ಅಥವಾ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಯನ್ನು ವೈದ್ಯಾಧಿಕಾರಿಗಳಿಗೆ ನೀಡಬೇಕು